
ಪರೋಪಕಾರದ ಆಶಯ.. ಮಗುವೊಂದರ ದುರಂತ ಅಂತ್ಯ : ಗ್ರಾಮವೊಂದರಲ್ಲಿ ಕರುಳು ಹಿಂಡುವ ಘಟನೆ
ಹೊಸನಗರ: ತಾಯಿಯ ಮಡಿಲಿನಿಂದ ಈಗತಾನೆ ಕಣ್ಣುಬಿಟ್ಟು.. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡಿಕೊಂಡಿದ್ದ ಮಗುವೊಂದು ಪರೋಪಕಾರದ ಆಶಯದಲ್ಲಿ ಬೆಂದು ದುರಂತ ಅಂತ್ಯ ಕಂಡ ಘಟನೆ ನಗರ ಸಮೀಪದ ಹಿರೀಮನೆಯಲ್ಲಿ ನಡೆದಿದೆ.
ಹೌದು ಹೊಸನಗರ ತಾಲೂಕು ನಗರ ಸಮೀಪದ ಹಿರೀಮನೆಯಲ್ಲಿ ಕಳೆದ ಅ.24 ಗುರುವಾರ ಇಂತಹ ದುರಂತಕ್ಕೊಂದು ಸಾಕ್ಷಿಯಾಗಿದೆ.
ಶಾಸಕ ಆರಗ ಜ್ಞಾನೇಂದ್ರ ಹೊಸನಗರ ಭಾಗದ ಆಪ್ತ ಸಹಾಯಕ ರಾಜೇಶ ಹಿರಿಮನೆ, ತಾಪಂ ಮಾಜಿ ಸದಸ್ಯೆ ಅಶ್ವಿನಿ ಪಾಟೀಲ್ ಇವರ ಕರುಳಿನಕುಡಿ ಈ ದುರಂತದಲ್ಲಿ ಧಾರುಣ ಅಂತ್ಯ ಕಂಡಿದ್ದು ಕರುಳು ಹಿಚುಕುವಂತಿದೆ.


2 ವರ್ಷದ ಮಗು ಅಥರ್ವ ಇನ್ನಿಲ್ಲ:
ರಾಜೇಶ ಹಿರೀಮನೆ ಕೊನೆಯ ಪುತ್ರ ಅಥರ್ವ ಕಳೆದ ಅ.24ರ ಗುರುವಾರ ಮೈಮೇಲೆ ಮಾಡಿಟ್ಟಿದ್ದ ಬಿಸಿ ಟೀ ಬೀಳಿಸಿಕೊಂಡು ಗಂಭೀರ ಗಾಯಗೊಂಡಿದ್ದ. ಕೂಡಲೇ ಮಗುವನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಯ್ತು. ಕಳೆದ 8 ದಿನದಿಂದ ನೀಡುತ್ತಿದ್ದ ಚಿಕಿತ್ಸೆ ಫಲಕಾರಿಯಾಗಿದೆ ಇನ್ನಷ್ಟೇ ಜಗತ್ತು ನೋಡಬೇಕಿದ್ದ ಮಗು ನ.1 ಬೆಳಿಗ್ಗಿನ ಜಾವ ಅಸುನೀಗಿದೆ.
ಪರೋಪಕಾರ ತಂದ ಆಪತ್ತು:
ಅಂದು ನೆರೆಹೊರೆಯಲ್ಲಿ ಒಬ್ಬರು ಹಿರಿಯರು ತೀರಿ ಹೋಗಿದ್ದು, ಅವರ ಮನೆಯಲ್ಲಿ ರಾತ್ರಿ ವೇಳೆ ಇದ್ದ ಜನರಿಗೆ ಟೀ ಮಾಡಿಕೊಡುವ ಸದಾಶದೊಂದಿಗೆ ರಾಜೇಶ ಮತ್ತು ಪತ್ನಿ ಅಶ್ವಿನಿ ತಮ್ಮ ಮನೆಗೆ ಬಂದಿದ್ದಾರೆ. 10 ರಿಂದ 15 ಕಪ್ ಟೀ ಮಾಡಿ ಪಾತ್ರೆಗೆ ಹಾಕಿ ಜಗಲಿ ಮೇಲೆ ಇಡಲಾಗಿತ್ತು. ಆಟವಾಡುತ್ತ ಬಂದ ಮಗು ಅದನ್ನು ಎಳೆದಿದೆ. ಪಾತ್ರೆಯಲ್ಲಿದ್ದ ಬಿಸಿ ಟೀ ಮೈಮೇಲೆ ಸುರಿದಿದೆ. ಮೈಯೆಲ್ಲ ಸುಟ್ಟುಕೊಂಡ ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆರಂಭ ಪರವಾಗಿಲ್ಲ ಮಗು ಚೇತರಿಸಿಕೊಳ್ಳುತ್ತಿದೆ ಎಂಬ ಸಂದೇಶ ಸಮಾಧಾನ ತಂದಿತ್ತು. ಆದರೆ ದುರದೃಷ್ಟವಶಾತ್ ಮಗು ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದೆ. ಮದ್ಯರಾತ್ರಿ ಎದ್ದು ಪರೋಪಕಾರ ಮಾಡುವ ಆಶಯವೇ ತೋರಿದ್ದೇ ರಾಜೇಶ ದಂಪತಿಗಳ ಪಾಲಿಗೆ ದುರಂತವಾಗಿದ್ದು ಮಾತ್ರ ದೇವರಿಗೆ ಪ್ರೀತಿ ಎಂಬಂತಾಗಿದೆ.
ಸ್ಮಶಾನ ಮೌನ:
ಮಗುವಿನ ದುರಂತ ಅಂತ್ಯದ ಸುದ್ದಿ ಇಂದು ಬೆಳಿಗ್ಗೆ ಬರುತ್ತಿದ್ದಂತೆ ಗ್ರಾಮದಲ್ಲಿ ಬರಸಿಡಿಲು ಹೊಡೆದಂತಾಗಿದೆ. ಸುತ್ತಮುತ್ತಲ ಭಾಗದಲ್ಲಿ ಸ್ಮಶಾನ ಮೌನ ಆವರಿಸಿದೆ.
