
ಬೆಂಗಳೂರು: KSRTC ಬಸ್ ಮತ್ತು ಬೈಕ್ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಜೆಬಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮೂಡುಗೊಪ್ಪನಗರದ ಕೊಟ್ಟನಕೇರಿ ವಾಸಿ ಉಮರ್ ಸಾಬ್ ಪುತ್ರ ಬೈಕ್ ಸವಾರ ಆರೀಸ್ (26) ಮೃತ ಯುವಕ.


ಜೆಬಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ವಿಮಾನನಿಲ್ದಾಣ ರಸ್ತೆಯ ನಿರ್ಗಮನ ಧ್ವಾರದ ಬಳಿ HAL ಕಡೆಯಿಂದ ISRO ಕಡೆಗೆ ಹೋಗುತ್ತಿದ್ದ KSRTC ಬಸ್ ಮುಂದೆ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಆಯತಪ್ಪಿ ಕೆಳಗೆ ಬಿದ್ದ ಬೈಕ್ ಸವಾರನ ತಲೆಯ ಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮ ಬೈಕ್ ಸವಾರ ಆರೀಸ್ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.
ಬೆಂಗಳೂರು ಜೆಬಿ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಸವಾರ ಆರೀಸ್ ಬೆಂಗಳೂರು ವೈಟ್ ಫೀಲ್ಡ್ (Whitefield) ನಲ್ಲಿ ಸ್ವಂತ ಫೂಟ್ ವೇರ್ (Foot Wear) ಅಂಗಡಿಯನ್ನು ಸ್ವಂತವಾಗಿ ನಡೆಸುತ್ತಿದ್ದ. ಕಳೆದ ಎರಡು ವರ್ಷದಿಂದ ಬೆಂಗಳೂರಿನಲ್ಲಿ ಸ್ವಂತ ಉದ್ಯೋಗ ಮಾಡಿಕೊಂಡಿದ್ದ.
ಒಂದು ದಿನ ಮುಂಚೆಯಷ್ಟೇ ಮನೆಗೆ ಹೋಗಿ ಬಂದಿದ್ದ ಆರೀಸ್:
ಮೂಡುಗೊಪ್ಪ ಕೊಟ್ಟನಕೇರಿ ತನ್ನ ಮನೆಯ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿ, ಸೋಮವಾರ ರಾತ್ರಿ ಹೊರಟು ಮಂಗಳವಾರ ಬೆಳಿಗ್ಗೆಯಷ್ಟೆ ಬೆಂಗಳೂರಿಗೆ ವಾಪಾಸಾಗಿದ್ದ. ತಂದೆ ಉಮರ್ ಸಾಬ್ ಬೆಂಗಳೂರು – ಕುಂದಾಪುರ ದುರ್ಗಾಂಬಾ ಬಸ್ಸಿ ಚಾಲಕರಾಗಿದ್ದು, ಬೆಂಗಳೂರಿನಿಂದ ವಾಪಾಸು ತೆರಳುವ ಮುನ್ನ ಮಗ ಆರೀಸ್ ನೊಂದಿಗೆ ಮಾತನಾಡಿದ್ದರು. ಅದಾಗಿ ಕೆಲವೇ ಹೊತ್ತಿನಲ್ಲಿ ಮಗ ಆರೀಸ್ ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿದಿದೆ. ಕೂಡಲೇ ಬಸ್ಸಿಗೆ ಬದಲಿ ಚಾಲಕನ ವ್ಯವಸ್ಥೆ ಮಾಡಿ ಘಟನಾ ಸ್ಥಳಕ್ಕೆ ತೆರಳಿದ್ದರು.
ಶವದ ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಮೂಡುಗೊಪ್ಪ ನಗರಕ್ಕೆ ತೆಗೆದುಕೊಂಡು ಹೋಗಲಾಗುತ್ತಿದ್ದು ಬಳಿಕ ಅಂತ್ಯಕ್ರಿಯೆ ನಡೆಯಲಿದೆ.
