
ಅಮ್ಮನಘಟ್ಟ ವಿಚಾರದಲ್ಲಿ ಸುಳ್ಳು ಆರೋಪ ಮಾಡುತ್ತಿರುವ ಬಿ.ಸ್ವಾಮಿರಾವ್ | ಜೇನುಕಲಮ್ಮ ದೇವಸ್ಥಾನ ಅಭಿವೃದ್ಧಿಯಾಗಿದ್ದು ನಮ್ಮ ಸಮಿತಿ ಅಧಿಕಾರದಲ್ಲಿದ್ದಾಗ | ಕಲಗೋಡು ರತ್ನಾಕರ್.
ಹೊಸನಗರ: ಇತಿಹಾಸ ಪ್ರಸಿದ್ಧ ಜೇನುಕಲ್ಲಮ್ಮ ದೇವಸ್ಥಾನ ಅಮ್ಮನಘಟ್ಟ ಅಭಿವೃದ್ಧಿಯಾಗಿದ್ದು ನಮ್ಮ ಸಮಿತಿ ಅಧಿಕಾರದಲ್ಲಿದ್ದಾಗ ಆದರೆ ಈಗಿನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿ ಸ್ವಾಮಿರಾವ್ ವಿನಾಕಾರಣ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ ಎಂದು ಜೇನುಕಲ್ಲಮ್ಮ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್ ಆರೋಪಿಸಿದರು.
ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನಾನು ಹತ್ತು ವರ್ಷಗಳ ಕಾಲ ದೇವಸ್ಥಾನ ಸಮಿತಿಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು, ಅವಧಿಯಲ್ಲಿ 27 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಮಾಡಿಸಿ ದೇವಸ್ಥಾನಕ್ಕೆ ಪಡೆದುಕೊಂಡಿದ್ದೇವೆ. ರಸ್ತೆ ನಿರ್ಮಾಣ ಮಾಡಿದ್ದೇವೆ. ಭೋಜನ ಶಾಲೆ, ಕುಡಿಯುವ ನೀರು ಅಭಿವೃದ್ಧಿ ಮಾಡಲಾಗಿದೆ. ನಮ್ಮ ಅವಧಿಯಲ್ಲಿ ರೂ.28 ಲಕ್ಷ ದೇವಸ್ಥಾನದ ದೇಣಿಗೆ ಹಣವನ್ನು ಸರ್ಕಾರದ ಖಜಾನೆಗೆ ಜಮಾ ಮಾಡಿದ್ದೇವೆ. ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಧಿಕಾರಕ್ಕೆ ಬಂದಂತಹ ನಮ್ಮ ಸಮಿತಿ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಅಲ್ಲಿ ಅಭಿವೃದ್ಧಿಯನ್ನು ಮಾಡಿದೆ.
ಅದು ಅಲ್ಲದೆ ಈಗೇನು ನೂತನ ಶಿಲಾಮಯ ದೇಗುಲ ನಿರ್ಮಾಣವಾಗುತ್ತಿದೆ ಅದಕ್ಕು ಕೂಡ ಸಂಕಲ್ಪ ಮಾಡಿದ್ದು ನಮ್ಮ ಸಮಿತಿ. ದೇವಸ್ಥಾನ ಶಿಲಾಮಯ ದೇಗುಲ ನಿರ್ಮಾಣಕ್ಕೆ ಕಲ್ಲನ್ನ ತರಿಸಿ ಅದರ ಕೆತ್ತನೆಗೆ ಶಿಲ್ಪಿಗೆ ಹಣವನ್ನು ನೀಡಿರುವುದು ಸೇರಿದಂತೆ ದೇವಾಲಯ ನಿರ್ಮಾಣ ಕಾಮಗಾರಿ ನಮ್ಮ ಅವಧಿಯಲ್ಲಿಯೇ ಶೇ 60 ರಿಂದ 70 ರಷ್ಟು ಮುಗಿದಿತ್ತು. ಈಗಲೂ ಸಹ ನಾವು ಕಟ್ಟಡ ನಿರ್ಮಾಣಕ್ಕೆ ಯಾರೊಂದಿಗೆ ವ್ಯವಹರಿಸಿದ್ದೆವೋ.. ಅವರೇ ಅದರ ಕೆಲಸವನ್ನ ಮುಂದುವರಿಸುತ್ತಿದ್ದಾರೆ.
ನಮ್ಮ ಅವಧಿಯಲ್ಲಿ ಪಕ್ಷಬೇಧವಿಲ್ಲದೆ ಎಲ್ಲರನ್ನ ಒಗ್ಗೂಡಿಸಿ ದೇವಾಲಯದ ಅಭಿವೃದ್ಧಿಗೆ ಕೆಲಸವನ್ನು ಮಾಡಿದ್ದೇವೆ. ಆದರೆ ಈಗ ವಾತಾವರಣ ಅಲ್ಲಿಲ್ಲ ಎಂದರು.
ಅದಾಗಿಯೂ ದೇವಸ್ಥಾನದ ಒಂದಿಷ್ಟು ಹಣ ಹಿಂದಿನ ಸಮಿತಿಯ ವ್ಯಕ್ತಿಯೊಬ್ಬರ ವೈಯಕ್ತಿಕ ಖಾತೆಯಲ್ಲಿದೆ ಎಂಬ ಇವರ ಆರೋಪ ಸತ್ಯಕ್ಕೆ ದೂರವಾಗಿದೆ ಹಣವಿದ್ದು ನಿಜ ಆದರೆ ಅದು ಹಿಂದಿನ ಅಭಿವೃದ್ಧಿ ಸಮಿತಿಯ ಖಾತೆಯಲ್ಲಿದೆ ಅದನ್ನ ನಾವು ಶಾಸಕರ ಗಮನಕ್ಕೆ ತಂದು ಕಂದಾಯ ಇಲಾಖೆಗೆ ಕೊಡುತ್ತೇವೆ ಹೊರತು ಈಗಿನ ಅಧ್ಯಕ್ಷರ ಕೈಯಲ್ಲಿ ಕೊಡುವುದಿಲ್ಲ. ಒಂದು ನಯಾ ಪೈಸೆ ಹಣವನ್ನ ತರದೆ ನಾವು ಮಾಡಿಟ್ಟಂತಹ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಎಲ್ಲವನ್ನು ಮಾಡಿದ್ದೇನೆ ಎಂದು ಬಿಂಬಿಸಲು ಹೊರಟಿದ್ದಾರೆ. ಹಾಗೆಯೇ ಹಿಂದಿನ ನೀಲಿ ನಕ್ಷೆಯಂತೆ ದೇವಸ್ಥಾನ ನಿರ್ಮಾಣವಾಗುತ್ತಿಲ್ಲ ಇದರಿಂದ ದೇವಸ್ಥಾನ ನಿರ್ಮಾಣದಲ್ಲಿ ಒಂದಿಷ್ಟು ನಷ್ಟ ಸಂಭವಿಸಲಿದ್ದು ಅದಕ್ಕೆ ನಾವು ಎಂದಿಗೂ ಅವಕಾಶವನ್ನು ಕೊಡುವುದಿಲ್ಲ ಎಂದು ತಿಳಿಸಿದರು.
ಹಾಗೆಯೇ ಕ್ಷೇತ್ರದ ಶಾಸಕರಿಗೆ ಆ ಸಮಿತಿಯಿಂದ ಯಾವುದೇ ರೀತಿಯ ಗೌರವ ದೊರೆತಿಲ್ಲ ಈವರೆಗೂ ಯಾವುದೇ ಒಂದು ಸಭೆಗೂ ಸಹ ಅವರನ್ನು ಕರೆದಿಲ್ಲ ಇದೀಗ ಪತ್ರಿಕೆಗಳಿಗೆ ಶಾಸಕರು ಕ್ಷೇತ್ರಕ್ಕೆ ಭೇಟಿ ನೀಡುತ್ತಿಲ್ಲ ಎಂದು ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ ಮೊದಲು ಕ್ಷೇತ್ರದ ಶಾಸಕರಿಗೆ ಹೇಗಿ ಗೌರವದಿಂದ ನಡೆದುಕೊಳ್ಳಬೇಕು ಎಂಬುದನ್ನು ಅ ಸಮಿತಿ ತಿಳಿದುಕೊಳ್ಳಲಿ. ಹಿಂದೆ ನಮ್ಮ ಸಮಿತಿ ಅಧಿಕಾರದಲ್ಲಿದ್ದಾಗ ಕ್ಷೇತ್ರವನ್ನ ಹೇಗೆ ಅಭಿವೃದ್ಧಿಪಡಿಸಿದ್ದೆವು ಮುಂದೆಯೂ ಸಹ ನಮ್ಮ ಶಾಸಕರೊಂದಿಗೆ ಸೇರಿ ಅದನ್ನ ಅಭಿವೃದ್ಧಿಪಡಿಸುವ ಕೆಲಸ ನಾವು ಮಾಡಲಿದ್ದೇವೆ ಎಂದರು.
ಈ ವೇಳೆ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಕೊಡೂರು, ಚಿದಂಬರ ಮಾರುತಿಪುರ, ಗುರುರಾಜ್, ಉಮೇಶ್, ಎಂಪಿ ಸುರೇಶ್ ಉಪಸ್ಥಿತರಿದ್ದರು.