
ಬೆಂಗಳೂರು.ಆ.10: ವಾರ್ತಾ ಇಲಾಖೆಯಿಂದ ಪತ್ರಕರ್ತರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರನ್ನು ಗಮನ ಸೆಳೆಯಿತು.
ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಭೇಟಿಯಾಗಿದ್ದ ನಿಯೋಗ, ಹೆಲ್ತ್ ಕಾರ್ಡ್ ವಿಳಂಬ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಿದ ಬಳಿಕ ಈ ಯೋಜನೆ ಜಾರಿಗೆ ಉಸ್ತುವಾರಿ ಅಧಿಕಾರಿಯೊಬ್ಬರನ್ನು ನೇಮಕ ಮಾಡಲು ಕ್ರಮ ಕೈಗೊಂಡರು.
ಜಂಟಿ ನಿರ್ದೇಶಕ ಪುಟ್ಟಸ್ವಾಮಯ್ಯ ಅವರನ್ನು ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಕ ಮಾಡಿದರು.
ಸರ್ಕಾರವೇ ಎಲ್ಲರ ಆರೋಗ್ಯ ಕಾಳಜಿ ಬಗ್ಗೆ ದಿನ ನಿತ್ಯ ಪ್ರಚಾರ ಮಾಡುತ್ತಿದೆ. ಆದರೆ ಪತ್ರಕರ್ತರ ಆರೋಗ್ಯದ ಕಾಳಜಿಗೆ ಇಲಾಖೆ ಕ್ರಮವಹಿಸಿಲ್ಲ ಈಗಲಾದರೂ ಎಲ್ಲಾ ಪತ್ರಕರ್ತರಿಗೆ ಆರೋಗ್ಯ ಕಾಡ್೯ ಕೊಡಿಸಲು ಕಾಳಜಿ ವಹಿಸಿ ಎಂದು ಕೆಯುಡಬ್ಲ್ಯೂಜೆ
ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಗಮನ ಸೆಳೆದರು.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೂಡಲೇ ಹೆಲ್ತ್ ಕಾರ್ಡನ್ನು ಕೊಡಲು ನಿರ್ದೇಶನ ನೀಡಲಾಗಿತ್ತು. ಆದರೂ ಅದು ಪರಿಪೂರ್ಣವಾಗಿ ಇದನ್ನು ಮಾಡಿಲ್ಲ. ಇಲಾಖೆಯೇ ಈ ಬಗ್ಗೆ ಗಮನ ನೀಡದೆ ಇದ್ದರೆ ಹೇಗೆ? ಎಂದು ಪ್ರಶ್ನಿಸಿದರು.
ಆರೋಗ್ಯ ಕಾಡ್೯ ವಿಚಾರದಲ್ಲಿ ಇರುವ ಗೊಂದಲಗಳು ಬಗೆಹರಿದಿಲ್ಲ. ಈ ಬಗ್ಗೆ ಹೇಳಿ ಸಾಕಾಗಿದ್ದು ಪ್ರತಿಭಟನೆ ಅನಿವಾರ್ಯವಾಗಿದೆ
ಎಂದು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಆಯುಕ್ತರು,
ಈ ಕ್ರಮ ಕೈಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ಎಲ್ಲರಿಗೂ ಹೆಲ್ತ್ ಕಾರ್ಡ್ ಕೊಡಿಸುವ ಭರವಸೆ ನೀಡಿದ್ದಾರೆ.
ಹೆಲ್ತ್ ಕಾರ್ಡ್ ನೀಡುವುದರಿಂದ ಮುಖ್ಯಮಂತ್ರಿ ಪರಿಹಾರ ನಿಧಿ ನೆರವು ಕೋರಿ ಬರುವ ಅರ್ಜಿಗಳು ಕಡಿಮೆ ಆಗಲಿವೆ. ನಿತ್ಯ ಸಿಎಂ ಪರಿಹಾರ ನಿಧಿಗೆ ಸಾಲು ಸಾಲು ಅರ್ಜಿಗಳು ಬರುತ್ತಿರುವುದನ್ನು ತಪ್ಪಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಆರೋಗ್ಯ ಕಾಡ್೯ ನೀಡಲು ಇರುವ ಅಡ್ಡಿಗಳಲ್ಲಿ ಒಂದಂಶ ಖಾಯಂ ನೌಕರ ಎನ್ನುವ ಪದ ಬಳಕೆ ತೆಗೆದು ಹಾಕಲು ತಿಳಿಸಿದ್ದು, ಇದಕ್ಕೂ ಸ್ಪಂದಿಸಿರುವ ಆಯುಕ್ತರು ತಕ್ಷಣ ಸರ್ಕಾರಿ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ.
ಆರೋಗ್ಯ ಕಾರ್ಡ್ ನೀಡಲು ಜಿಲ್ಲಾ ಮಾಧ್ಯಮ ಸಮಿತಿಗಳು ಶಿಫಾರಸ್ಸು ಮಾಡಿದರೇ ಸಾಕು, ಖಾಯಂ ಪದದ ಬದಲು ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಎಂದು ಬದಲಾಯಿಸಬೇಕು ಎಂದು ಸಲಹೆ ನೀಡಲಾಗಿದೆ.
ಗ್ರಾಮೀಣ ಪತ್ರಕರ್ತರಿಗೂ ಬಸ್ ಪಾಸ್ ನೀಡಲು ಆಗ್ರಹ:
ಈಗಾಗಲೇ ಇಲಾಖಾ ನಿಯಮದಲ್ಲಿ ಗ್ರಾಮೀಣ ಪತ್ರಕರ್ತರಿಗೆ ನೀಡಲು ಅವಕಾಶವಿದೆ ಅದನ್ನು ಅನುಷ್ಠಾನ ಮಾಡಿ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೂ ಬಸ್ ಪಾಸ್ ನೀಡಲು ಆಗ್ರಹಿಸಲಾಗಿದೆ.
ಅಕ್ರಿಡಿಟೇಶನ್ ಸಮಿತಿ ಸಭೆ
ಕೆಯುಡಬ್ಲ್ಯೂಜೆ ಒತ್ತಾಯದ ಮೇರೆಗೆ ಸರ್ಕಾರ ಸಮಿತಿ ರಚಿಸಿದೆ. ಕೂಡಲೇ ಸಭೆ ನಡೆಸಿ ಅಕ್ರಿಡಿಟೇಶನ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲು ಮನವಿ ಮಾಡಲಾಯಿತು.
ಮಾಸಾಶನ ಷರತ್ತು ಸರಳೀಕರಣಕ್ಕೆ ಕ್ರಮ|
ಪತ್ರಕರ್ತರ ಮಾಸಾಶನ ವಿಚಾರಕ್ಕೆ ಸಂಬಂದಿಸಿದಂತೆ ಈಗಿರುವ ಕೆಲ ಕಠಿಣ ನಿಯಮಗಳನ್ನು ಸರಳೀಕೃತ ಮಾಡಬೇಕು ಎಂದು ಮನವಿ ಮಾಡಲಾಗಿದ್ದು, ಈ ಬಗ್ಗೆ ಕ್ರಮಕ್ಕೆ ಕೂಡಲೇ ಸರ್ಕಾರಕ್ಕೆ ಪತ್ರ ಬರೆಯಲು ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ಬೀದರ ಜಿಲ್ಲಾ ಪತ್ರಕರ್ತರ ಭವನದ ನಿರ್ವಹಣೆಗೆ ಪತ್ರ|
ಬೀದರ್ ಜಿಲ್ಲಾ ಪತ್ರಕರ್ತರ ಭವನದ ಉದ್ಘಾಟನೆಗೆ ಆದಷ್ಟು ಬೇಗ ದಿನಾಂಕ ನಿಗಧಿ ಮಾಡಬೇಕು. ಭವನ ನಿರ್ವಹಣೆ ಬಗ್ಗೆ ಇಲಾಖೆಯಿಂದ ಸುತ್ತೋಲೆ ಕಳುಹಿಸಲು ಕ್ರಮವಹಿಸಲು ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.