
ಹೊಸಂಗಡಿ: ಅದು ಮಧ್ಯರಾತ್ರಿಯ 2.30ರ ಹೊತ್ತು ಅದೇನೋ ಅಂದು ತಿಂದಿದ್ದು ತುಸು ಹೆಚ್ಚಾಯಿತೇನೋ.. ಗೊತ್ತಿಲ್ಲ.. ಯಾವುದರ ಪರಿವೆ ಇಲ್ಲದೇ ನಿದ್ರೆಗೆ ಜಾರಿದ ಸಮಯ.. ಅದೇನೋ ಬುಡಮೇಲಾದಂತೆ ಅನುಭವವಾಗಿ ಕಣ್ಣು ಬಿಡುವ ಹೊತ್ತಿಗೆ ಯಮನ ಬಾಯಿಗೆ ಆಹಾರವಾಗಿ.. ಇನ್ನೇನು ಪ್ರಾಣಪಕ್ಷಿ ಹಾರಿ ಹೋಗಬೇಕು ಎಂಬ ಅಂತಿಮ ಕ್ಷಣ ಎದುರು ನೋಡುವಾಗಲೇ.. .. ಬದುಕಿತು ಬಡ ಜೀವ ಎಂದು ನಿಟ್ಟುಸಿರು ಬಿಡುವಂತಾಯ್ತು.
ಹೌದು ಇದು ಶ್ವಾನವೊಂದರ ಸುದ್ದಿ. ಉಡುಪಿ ಜಿಲ್ಲೆ ಹೊಸಂಗಡಿಯ ವಾರಾಹಿ ಪವರ್ ಹೌಸ್ ಭದ್ರತಾ ಕೊಠಡಿಯ ಆವರಣದಲ್ಲಿ ನಡೆದ ಘಟನೆ ಇದು. ಅಂತದ್ದೇನಾಯ್ತು ಅಂತೀರಾ ಈ ಸುದ್ದಿ ಪೂರ್ತಿ ಓದಿ.
ಹೊಸಂಗಡಿ ಪವರ್ ಹೌಸ್ ಭಧ್ರತಾ ಕೊಠಡಿಯ ಆವರಣದೊಳಗೆ ಶ್ವಾನವೊಂದು ನಿದ್ರಿಸುತ್ತಿರುವಾಗಲೇ.. ಹಸಿದ ಚಿರತೆಯೊಂದು ಆವರಣದೊಳಗೆ ನುಗ್ಗಿ ದಾಳಿನಡೆಸಿದೆ. ಕ್ಷಣ ಮಾತ್ರದಲ್ಲಿ ಶ್ವಾನದ ಕುತ್ತ್ತಿಗೆ ಬಾಯಿ ಹಾಕಿ ಕಾಡಿನತ್ತ ಓಟ ಕಿತ್ತಿದೆ. ಇದನ್ನು ನೋಡಿದ ಮತ್ತೊಂದು ಪುಟ್ಟ ನಾಯಿಮರಿ ಬೊಗಳಿದೆ. ಕೊಠಡಿಯೊಳಗಿದ್ದ ಸಿಬ್ಬಂದಿ ಯೋರ್ವ ದೊಣ್ಣೆ ಹಿಡಿದು ಹೊರ ಬಂದಿದ್ದಾನೆ. ಚಿರತೆ ನಾಯಿಯನ್ನು ಕೊಂಡೊಯ್ಯುತ್ತಿರುವುದು ನೋಡಿ ಎದೆಗುಂದದೆ ಬೆನ್ನಟ್ಟಿದ್ದಾನೆ. ಮಾತ್ರವಲ್ಲ ಚಿರತೆ ಬಾಯಿಗೆ ಆಹಾರವಾಗಲಿದ್ದ ಶ್ವಾನವನ್ನು ಬಿಡಿಸಿ ವಾಪಾಸು ಕರೆತಂದಿದ್ದಾನೆ.. ಆದರೆ ಅದಾಗಲೇ ನಾಯಿ ಗಾಯಗೊಂಡಿತ್ತು. ಇನ್ನೇನು ಬದುಕುವುದಿಲ್ಲ ಎನ್ನುವಾಗಲೇ ಚಿಕಿತ್ಸೆ ಫಲಿಸಿ ಚೇತರಿಸಿಕೊಂಡಿದೆ. ಒಟ್ಟಿನಲ್ಲಿ ಯಮನ ಬಾಯಿಗೆ ಹೋಗಿಕೂದಲೆಳೆ ಅಂತರದಲ್ಲಿ ಬಚಾವಾದ ಶ್ವಾನದ ಸ್ಥಿತಿ ಬದುಕಿತು ಬಡಜೀವ ಎಂದು ನಿಟ್ಟುಸಿರು ಬಿಡುವಂತಾಗಿತ್ತು.
ಗ್ರೇಟ್ ಈರಪ್ಪಗೌಡ್ರು:
ಶ್ವಾನವನ್ನು ಸಾವಿನ ದವಡೆಯಿಂದ ಬಚಾವ್ ಮಾಡಿದ ಶ್ರೇಯಸ್ಸು ರಾತ್ರಿ ಪಾಳಿಯಲ್ಲಿದ್ದ ಭದ್ರತಾ ಸಿಬ್ಬಂದಿ ಈರಪ್ಪಗೌಡರಿಗೆ ಸಲ್ಲಬೇಕು.
ಅಪಾಯದ ಪ್ರಾಣಿ ಚಿರತೆ ಹೆಸರು ಕೇಳಿದೊಡನೆ ಭಯಭೀತರಾಗುವ ಸನ್ನಿವೇಶದಲ್ಲಿ.. ಭಯ ತೊರೆದು ಚಿರತೆಯನ್ನೇ ಬೆನ್ನಟ್ಟಿ, ಯಮ(ಚಿರತೆ)ನ ಬಾಯಿಂದ ಶ್ವಾನವನ್ನು ಬಿಡಿಸಿಕೊಂಡ ಬಂದ ದಿಟ್ಟತನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ ಚೇತರಿಸಿಕೊಳ್ಳುತ್ತಿರುವ ಶ್ವಾನ ಕೂಡ ಗಾಯದ ನೋವಿನ ನಡುವೆಯೂ ಕೃತಜ್ಞತೆಯ ನೋಟ ಬೀರಿದೆ.
VIDEO | ಸಿಸಿ ಟಿವಿಯಲ್ಲೆ ದೃಶ್ಯ ಸೆರೆ
ಹೊಸಂಗಡಿ ಪವರ್ ಹೌಸ್ ಎದಿರುಭಾಗದ ಭದ್ರತಾ ಕೊಠಡಿ ಆವರಣದ ಒಳಗೆ ನುಗ್ಗಿದ ಚಿರತೆ ಶ್ವಾನವನ್ನು ಕಚ್ಚಿಕೊಂಡು ಓಡುತ್ತಿರುವ ದೃಶ್ಯ VIDEO ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..