NITTUR NSS CAMP | ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಳದ ಸ್ವತಂತ್ರ ಪಪೂ ಕಾಲೇಜಿನ ಎನ್ಎಸ್ಎಸ್ ಶಿಬಿರ ಉದ್ಘಾಟನೆ

ನಿಟ್ಟೂರು : ವಿದ್ಯಾರ್ಥಿ ಯುವಜನರ ದೃಷ್ಟಿ ಗ್ರಾಮ ಭಾರತದಲ್ಲಿ ಸರ್ವೋದಯದ ಸೃಷ್ಟಿ ಎಂಬ ಘೋಷವಾಕ್ಯದೊಂದಿಗೆ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಶ್ರೀ ಮೂಕಾಂಬಿಕಾ ದೇವಳದ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ಕೊಲ್ಲೂರು ಇವರಿಂದ ದಿನಾಂಕ ಅ.6ರಿಂದ ಏಳು ದಿನದ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ (NSS CAMP) ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ನಿಟ್ಟೂರಿನ ಶ್ರೀ ರಾಮೇಶ್ವರ ಸಭಾಭವನದ ವೇದಿಕೆಯಲ್ಲಿ ದೀಪ ಬೆಳಗುವ ಮೂಲಕ ಕೊಲ್ಲೂರು ಮೂಕಾಂಬಿಕ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಚಂದ್ರಶೇಖರ ಶೆಟ್ಟಿ ಕೆರಾಡಿ ಎನ್ಎಸ್ಎಸ್ ಶಿಬಿರಕ್ಕೆ ವಿಧ್ಯುಕ್ತ ವಾಗಿ ಚಾಲನೆ ನೀಡಿದರು.

ಉದ್ಘಾಟಿಸಿ ಮಾತನಾಡಿದ ಚಂದ್ರಶೇಖರ ಶೆಟ್ಟಿ ಕೆರಾಡಿ, ಎನ್.ಎಸ್.ಎಸ್ ನ ಹುಟ್ಟಿನ ಬಗ್ಗೆ ಅದರ ಗುರಿ ಮತ್ತು ಧ್ಯೇಯೋದ್ದೇಶದ ಬಗ್ಗೆ ಸಂಪೂರ್ಣವಾಗಿ ವಿವರಿಸಿ ಜೀವನದಲ್ಲಿ ಎನ್. ಎಸ್. ಎಸ್ ಹೇಗೆ ಪ್ರಭಾವವನ್ನು ಬೀರುತ್ತದೆ ಎನ್ನುವ ಮಹತ್ವವನ್ನ ತಿಳಿಸಿಕೊಟ್ಟರು.

ಶ್ರೀ ಮೂಕಾಂಬಿಕಾ ದೇವಳ ಪ.ಪೂ. ಕಾಲೇಜು, ಕೊಲ್ಲೂರು ಇದರ ಪ್ರಾಂಶುಪಾಲರಾದ ಎಸ್.ಅರುಣಪ್ರಕಾಶ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಶಿಬಿರವನ್ನು ಯಶಸ್ವಿಗೊಳಿಸಲು ಎಲ್ಲರ ಸಹಕಾರ ಕೋರಿದರು.

ಮಲೆನಾಡಿನಲ್ಲಿ ಮರೆಯಾಗುತ್ತಿರುವ ಹೂವಿನ ಕೋಲು, ಅಂಟಿಗೆ-ಪಿಂಟಿಗೆ (ಹಬ್ಬಹಾಡುವುದನ್ನು) ಜಾನಪದ ಪ್ರಸ್ತುತಿ ಮುಖಾಂತರ ಶಿಬಿರಾರ್ಥಿಗಳಿಗೆ ಪ್ರಸ್ತುತಪಡಿಸಲಾಯಿತು.

ಒಂದು ವಾರದ ಈ ಶಿಬಿರದ ಉದ್ದೇಶಗಳು ಶಾಲಾ ಆಟದ ಮೈದಾನದ ದುರಸ್ಥಿ ಕಾರ್ಯ, ಶಾಲಾ ಆವರಣ ಸ್ವಚ್ಚತೆ, ಚರಂಡಿ ನಿರ್ಮಾಣ, ಸ್ವಚ್ಚತಾ ಆಂದೋಲನ ಕಾರ್ಯಕ್ರಮ ಮತ್ತು ವಿವಿಧ ಜನಜಾಗೃತಿ ಕಾರ್ಯಕ್ರಮಗಳಾಗಿವೆ, ಜೊತೆಗೆ ಶೈಕ್ಷಣಿಕ ಕಾರ್ಯಕ್ರಮಗಳು, ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜೊತೆಗೂಡಲಿದೆ.

ಉದ್ಘಾಟನಾ ಸಮಾರಂಭ ವೇದಿಕೆಯಲ್ಲಿ ಎನ್. ಎಸ್.ಎಸ್ ನಾಯಕ/ಕಿ ಸಚಿನ್ ಕುಮಾರ್ ಶೆಟ್ಟಿ, ನಿರೀಕ್ಷಾ ಶೆಟ್ಟಿ, ಪಿ.ಡಿ.ಒ. ಪವನ್ ಕುಮಾರ್, ಸುರೇಶ್ ಮಾನಿ ಗುತ್ಯಮ್ಮ ಟ್ರಷ್ಟ್ ಅಧ್ಯಕ್ಷರು, ಕೆ. ಎಸ್. ಕೃಷ್ಣಮೂರ್ತಿ ಅಧ್ಯಕ್ಷರು ರಾಮೇಶ್ವರ ದೇವಸ್ಥಾನ ಸಮಿತಿ, ಪಂಚಾಯತ್ ಅಧ್ಯಕ್ಷರು ವಿನೋದಾ ಗುರುಮೂರ್ತಿ ಮತ್ತು ಉಪಾಧ್ಯಕ್ಷರು ಶೋಭಾ ಉದಯ್‌ಕುಮಾರ್ ಹಾಗೂ ವಿಶ್ವನಾಥ್ ನಾಗೋಡಿ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ವರದಿ: ವಿಜಯ ನಿಟ್ಟೂರು

Exit mobile version