
ಶಿವಮೊಗ್ಗ.ಆ.14: ಬಸವಾದಿ ಶರಣರು ಪ್ರತಿಪಾದಿಸಿದ ಪಂಚಾಚಾರಗಳು ಯಾವುದೇ ಸಮುದಾಯದ ಅಭ್ಯುದಯಕ್ಕೆ ಕಾರಣವಾಗಬಲ್ಲುವು. ಎಂದು ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ತಿಳಿಸಿದರು.
ಬಸವಕೇಂದ್ರದಲ್ಲಿ ಶಿವಾನುಭವ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಮಾತಾಡಿದ ಅವರು, ಲಿಂಗಾಚಾರ ಏಕದೇವ ನಿಷ್ಠೆಯನ್ನು, ಸದಾಚಾರ ದುಡಿಯುವ ಮತ್ತು ಹಂಚಿ ಉಣ್ಣುವ ರೀತಿಯನ್ನು, ಶಿವಾಚಾರ ಎಲ್ಲರನ್ನೂ ತನ್ನಂತೆ ಕಾಣುವ, ಭೇದರಹಿತ ಉದಾತ್ತ ಗುಣಗಳನ್ನು, ಗಣಾಚಾರ ನ್ಯಾಯಕ್ಕಾಗಿ ಹೋರಾಡುವ ಮನೋಭಾವವನ್ನು, ಭೃತ್ಯಾಚಾರ ವಿನಯವಂತಿಕೆಯನ್ನು ಪ್ರತಿಪಾದಿಸುತ್ತವೆ. ಈ ಮೌಲ್ಯಗಳು ಮಾನವ ಕುಲದ ಶ್ರೇಷ್ಠತೆಯನ್ನು ಹೆಚ್ಚಿಸುತ್ತವೆ. ಪ್ರತಿಯೊಬ್ಬನೂ ಈ ಮೌಲ್ಯಗಳನ್ನು ಅನುಸರಿಸಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಸಿಂದಿಗೆರೆಯ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮಿಗಳವರು ಮಾತನಾಡಿ, ವಚನಗಳು ನಮ್ಮ ಅಹಂಅನ್ನು ನಿರಸನಗೊಳಿಸುತ್ತವೆ. ಅಹಂನಿರಸನ ಮಾನವನನ್ನು ಮಹಾದೇವನನ್ನಾಗಿಸಬಲ್ಲುದು. ವಚನಗಳು ಕೇವಲ ಬೋಧನೆಗಾಗಿಯಲ್ಲ, ಅವುಗಳ ಅನುಸರಣೆಯಾಗಬೇಕು. ಈ ಹಿನ್ನೆಲೆಯಲ್ಲಿ ಪಂಚಾಚಾರಗಳು ಶರಣರ ಆಚಾರಸಂಹಿತೆಗಳು ಎಂದು ತಿಳಿಸಿದರು.
ಕಾರ್ಯಕ್ರಮದ ಸಾನ್ನಿದ್ಯವಹಿಸಿದ್ದ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮಿಗಳು ಮಾತನಾಡಿ, ಜಗತ್ತಿನ ಇತಿಹಾಸದಲ್ಲಿ ಒಂದು ದೊಡ್ಡ ಸಮುದಾಯ ಒಂದೇ ಸಮಯದಲ್ಲಿ ಧರ್ಮ ಸಮಾಜ ಆಧ್ಯಾತ್ಮಗಳ ಕುರಿತ ಚರ್ಚೆ ನಡೆದದ್ದು ಹನ್ನೆರಡನೆಯ ಶತಮಾನದ ಅನುಭವಮಂಟಪದಲ್ಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸವಕೇಂದ್ರದ ಅಧ್ಯಕ್ಷ ಜಿ ಬೆನಕಪ್ಪ ಉಪಸ್ಥಿತರಿದ್ದರು.