
ಹೊಸನಗರ: ತಾಲೂಕಿನ ತ್ರಿಣಿವೆ ಗ್ರಾಮಪಂಚಾಯ್ತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ವೈ.ಕೃಷ್ಣಮೂರ್ತಿ ತೊಗರೆ ಉಪಾಧ್ಯಕ್ಷರಾಗಿ ಟಿ.ಡಿ.ಶ್ರೀನಿವಾಸ್ ಅವಿರೋಧ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಅದ್ಯಕ್ಷರಾಗಿದ್ದ ಎನ್.ಎಲ್.ಚಂದ್ರಶೇಖರ್, ಉಪಾಧ್ಯಕ್ಷ ವೈ ಕೃಷ್ಣಮೂರ್ತಿ ಒಡಂಬಡಿಕೆ ನೀಡಿದ ಹಿನ್ನೆಲೆ ತೆರವಾಗಿತ್ತು. 6 ಸದಸ್ಯಬಲದ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.
ಚುನಾವಣ ಅಧಿಕಾರಿಯಾಗಿ ತೋಟಗಾರಿಕ ಅಧಿಕಾರಿ ಪುಟ್ಟನಾಯ್ಕ ಕಾರ್ಯನಿರ್ವಹಿಸಿದ್ದು ಅದ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಬಂದ ಹಿನ್ನೆಲೆ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಅಭಿನಂದನೆ:
ಬಳಿಕ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ತಾಪಂ ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿ ಉತ್ತಮ ಮತ್ತು ಜನಪರ ಕೆಲಸ ಮಾಡುವಂತೆ ಸಲಹೆ ನೀಡಿದರು.
ಸಾಹಿತಿ ಗಣೇಶಮೂರ್ತಿ ಮತ್ತು ಬಸಪ್ಪಗೌಡ್ರು ಊರಿನ ಅಭಿವೃದ್ಧಿ ಕೆಲಸಗಳಿಗೆ ಜೊತೆ ಇರುವ ಭರವಸೆ ನೀಡಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.
ನೂತನ ಅಧ್ಯಕ್ಷ ವೈ ಕೈಷ್ಣಮೂರ್ತಿ ತೊಗರೆ, ಸಮಾಜದ ಕಟ್ಟಕಡೆಯ ವ್ಯಕ್ತಿಯಾಗಿದ್ದ ನನಗೆ ಗ್ರಾಮದ ಅತ್ಯನ್ನತ ಅಧಿಕಾರ ಸಿಕ್ಕಿರುವುದಕ್ಕೆ ಅಂಬೇಡ್ಕರ್ ಸಂವಿಧಾನಕ್ಕೆ ಗೌರವ ಸಲ್ಲಿಸುತ್ತೇನೆ. ಅಲ್ಲದೇ ಗ್ರಾಮದ ಎಲ್ಲರ ವಿಶ್ವಾಸ ಪಡೆದು ಕಾರ್ಯನಿರ್ವಹಿಸುವೆ ಎಂದು ಭರವಸೆ ನೀಡಿದರು.
ಮಾಜಿ ಅಧ್ಯಕ್ಷ ಎನ್.ಚಂದ್ರಶೇಖರ್, ಸದಸ್ಯರಾದ ಮಮತಾ, ಲೀಲಾವತಿ, ಪದ್ಮಾವತಿ, ಪ್ರಮುಖರಾದ ಗಣೇಶಮೂರ್ತಿ, ಬಸಪ್ಪಗೌಡ್ರು, ವಾಲೆಮನೆ ನಾಗೇಶ್, ಮುರುಗೇಶ್, ಪಿಡಿಒ ಬಿ.ಆರ್.ರಂಜಿತಾ ಉಪಸ್ಥಿತರಿದ್ದರು.
ಪಿಡಿಒ ಬಿ.ಆರ್.ರಂಜಿತಾ ಅಭಿನಂದನಾ ಕಾರ್ಯಕ್ರಮ ನಿರ್ವಹಿಸಿದರು.