ವ್ಯಸನದಿಂದ ಬಡ ಕುಟುಂಬಗಳು ಬೀದಿಗೆ ಬಂದಿವೆ : ಹೊಸನಗರದಲ್ಲಿ ಮದ್ಯ ವರ್ಜನ ಶಿಬಿರದಲ್ಲಿ ಮೋಹನ ಶೆಟ್ಟಿ
ಹೊಸನಗರ: ವ್ಯಸನದಿಂದ ಬಡ ಕುಟುಂಬಗಳು ಬೀದಿಗೆ ಬಂದಿವೆ. ವ್ಯಸನ ಮುಕ್ತ ಸಮಾಜ ಎಲ್ಲರ ಗುರಿಯಾಗಬೇಕು ಎಂದು ಧರ್ಮಸ್ಥಳ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ವಕೀಲ ಮೋಹನಶೆಟ್ಟಿ ಸಂಪೆಕಟ್ಟೆ ಹೇಳಿದರು.
ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದ ಗಾಯತ್ರಿ ಮಂದಿರದಲ್ಲಿ ನಡೆದ 2032ನೇ ಮದ್ಯವ್ಯರ್ಜನ ಶಿಬಿರದಲ್ಲಿ ಅವರು ಮಾತನಾಡಿದರು.
ವ್ಯಸನದಿಂದ ಜನರನ್ನು ಆಚೆಗೆ ತರುವ ನಿಟ್ಟಿನಲ್ಲಿ ಮದ್ಯವರ್ಜನ ಶಿಬಿರ ಸಹಕಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ವರ್ತಕ ವಿಜೇಂದ್ರಶೇಟ್, ಸಮಾಜದ ಸ್ವಾಸ್ಥ್ಯ ಹಾಳುಗೆಡುತ್ತಿರುವ ಕುಡಿತದ ಗೀಳಿಗೆ ಸುಲಭ ಬಲಿಪಶು ವಾದ ಯುವ ಸಮೂಹ ಇಂದು ಅಧಃಪತನ ದತ್ತ ಸಾಗುತ್ತಿದೆ. ಇಂದಿನ ಯುವ ಪೀಳಿಗೆ
ಮದ್ಯಪಾನ ಚಟಕ್ಕೆ ಬಲಿಯಾಗುತ್ತಿದ್ದಾರೆ. ದುಡಿಮೆಯ ಬಹುಪಾಲು ವ್ಯಸನಕ್ಕೆ ವ್ಯಯವಾಗುತ್ತಿದೆ. ಇದು ಆರ್ಥಿಕ, ಸಾಮಾಜಿಕ ಪಿಡುಗಿಗೆ ಕಾರಣವಾಗುತ್ತಿದೆ ಎಂದರು.
ವೇದಿಕೆಯ ಸದಸ್ಯ ಎನ್.ಆರ್.ದೇವಾನಂದ ಶಿಬಿರಕ್ಕೆ ಚಾಲನೆ ನೀಡಿದರು.
ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನಾಧಿಕಾರಿ ಪ್ರದೀಪ್ ಮಾತನಾಡಿದರು.
ಪ್ರಾದೇಶಿಕ ಯೋಜನಾಧಿಕಾರಿ ನಾಗರಾಜ ಕುಲಾಲ್, ಪ್ರದೀಪ್ ಹೆಗ್ಡೆ, ಶಶಿಕಲಾ, ನಾಗರತ್ನ ದೇವರಾಜ್, ಸದಾಶಿವ ಶ್ರೇಷ್ಠಿ, ಸತೀಶ ಕಾಲಸಸಿ, ಸೌಮ್ಯ, ನಾರಾಯಣ ಕಾಮತ್, ಡಾ.ಶಿವಯೋಗಿ, ಸತೀಶ್, ದೇವೇಂದ್ರ ಇದ್ದರು.