ಮಲ್ಲಂದೂರು ಮೀಸಲು ಅರಣ್ಯ ಒತ್ತುವರಿ ತೆರವು : ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ 6.24 ಎಕರೆ ತೆರವು
ಸಾಗರ: ಸಾಗರ ವಿಭಾಗ ವ್ಯಾಪ್ತಿಗೆ ಬರುವ ಸಾಗರ ತಾಲ್ಲೂಕು ಆನಂದಪುರಂ ಹೋಬಳಿ ಮಲಂದೂರು ಗ್ರಾಮದ ಸ.ನಂ 157 ರಲ್ಲಿ ಮೀಸಲು ಅರಣ್ಯ ದಲ್ಲಿ ಒತ್ತುವರಿ ಮಾಡಿದ್ದ 6.24 ಎಕರೆ ಜಾಗವನ್ನು ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವು ಮಾಡಲಾಗಿದೆ.
ಆರ್.ಎಂ ಷಣ್ಮುಖ ಎಂಬುವವರು ಮಲಂದೂರು ಮೀಸಲು ಅರಣ್ಯ ಪ್ರದೇಶದಲ್ಲಿ 6-24 ಎ/ಗುಂ ಪ್ರದೇಶವನ್ನು ಅನಧಿಕೃತವಾಗಿ ಒತ್ತುವರಿ ಮಾಡಿರುತ್ತಾರೆ. ಇದಲ್ಲದೇ ಸದರಿಯವರು ಶರಾವತಿ ಮುಳುಗಡೆ ಸಂತ್ರಸ್ಥರ ಯೋಜನೆಯಡಿ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಇವರು ಜಮೀನುಗಳನ್ನು ಮಂಜೂರಾತಿ ಪಡೆದಿದ್ದಾರೆ. ಇದರೊಂದಿಗೆ ಹಿಡುವಳಿ ಜಮೀನುಗಳನ್ನು ಹೊಂದಿರುವಂತೆ ದೊಡ್ಡ ಹಿಡುವಳಿದಾರರಾಗಿರುತ್ತಾರೆ. ಈ ಹಿನ್ನಲೆಯಲ್ಲಿ ಅರಣ್ಯ ಒತ್ತುವರಿಯನ್ನು ಕರ್ನಾಟಕ ಅರಣ್ಯ ಅಧಿನಿಯಮ 1963 ಕಲಂ 64(ಎ) ರ ಪ್ರಕಾರ ವಿಚಾರಣೆ ಕೈಗೊಂಡು ಒತ್ತುವರಿ ತೆರವಿಗೆ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಸದರಿ ಒತ್ತುವರಿ ಪ್ರದೇಶವನ್ನು ದಿನಾಂಕ:05.10.2025 ರಂದು ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಿ. ಮೋಹನ್ಕುಮಾರ್ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ ಎಂದು ಇಲಾಖಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಾಗರ ಎಸಿಎಫ್, ಕೆ. ಆನಂದಪುರ ವಲಯ ಅರಣ್ಯಾಧಿಕಾರಿ ಕುಮಾರಿ ಗೀತಾ ವಿ ನಾಯ್ಕ, ಶಿಕಾರಿಪುರ ಉಪ ವಿಭಾಗ, ಸಾಗರ, ಹೊಸನಗರ, ನಗರ, ಶಿಕಾರಿಪುರ, ಅಂಬ್ಲಿಗೊಳ ಮತ್ತು ಶಿರಾಳಕೊಪ್ಪ ವಲಯ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಅಲ್ಲದೇ ಸಾಗರ ತಹಶೀಲ್ದಾರ್, ಮತ್ತು ಸಿಬ್ಬಂದಿ, ಸಾಗರ ಸಿಪಿಐ ಆನಂದಪುರ ಪಿಎಸ್ಐ, ವೈದ್ಯಾಧಿಕಾರಿ, ಅಗ್ನಿಶಾಮಕದಳ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಕಾರ್ಯಾಚರಣೆಗೆ ಸಾಥ್ ನೀಡಿತ್ತು.
ಒತ್ತುವರಿ ತೆರವು ಕಾರ್ಯವನ್ನು ಕೈಗೊಂಡು ಪೂರ್ಣಗೊಳಿಸಿ ಸದರಿ ಒತ್ತುವರಿ ಪ್ರದೇಶವನ್ನು ಕಾನೂನು ಪ್ರಕಾರ ಅರಣ್ಯ ಇಲಾಖಾ ವಶಕ್ಕೆ ಪಡೆಯಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.