ಗ್ಯಾರಂಟಿಯಿಂದಾಗಿ ಅಭಿವೃದ್ಧಿ ಶೂನ್ಯ | ಗೃಹಸಚಿವನಾಗಿದ್ದಾಗ ಮುಯ್ಯಾಳು ಮಾಡಿಕೊಂಡಿದ್ದೆ | ಬೈಸೆ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಆರಗ

ಗ್ಯಾರಂಟಿಯಿಂದಾಗಿ ಅಭಿವೃದ್ಧಿ ಶೂನ್ಯ | ಗೃಹಸಚಿವನಾಗಿದ್ದಾಗ ಮುಯ್ಯಾಳು ಮಾಡಿಕೊಂಡಿದ್ದೆ | ಬೈಸೆ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಆರಗ

ಹೊಸನಗರ: ಈಗ ರಾಜ್ಯದಲ್ಲಿ ಏನಿದ್ದರೂ ಬರೀ ಗ್ಯಾರಂಟಿ. ಯಾವುದೇ ಅನುದಾನ ಬರದೇ ಅಭಿವೃದ್ಧಿ ಶೂನ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.

ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಬೈಸೆ ರಸ್ತೆಗೆ ರೂ 1 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಗ್ಯಾರಂಟಿ ಯೋಜನೆಗೆ ರೂ.62 ಸಾವಿರ ಕೋಟಿ ಹಣ ಸಂಗ್ರಹಣೆಗೆ ರಾಜ್ಯ ಸರ್ಕಾರ ತಡಕಾಡುತ್ತಿದೆ. ಯಾವುದೇ ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಆದರೆ ಕೇಂದ್ರ ಸರ್ಕಾರದ ಪಿಎಂಜಿಎಸ್‌ವೈ ಯೋಜನೆಯಿಂದ ಸಾಕಷ್ಟು ಹಣ ತಂದಿದ್ದೇನೆ ಮಾತ್ರವಲ್ಲ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿ ವಿವಿಧ ಅಭಿವೃದ್ಧಿ ಕಳೆದ ಬಾರಿ 20 ಕೋಟಿ ಹಣ ನೀಡಿದ್ದೇನೆ ಎಂದರು.

ಗೃಹ ಸಚಿವನಾಗಿದ್ದಾಗ ಮುಯ್ಯಾಳು
ನಾನು ಹಿಂದೆ ಗೃಹಸಚಿವನಾಗಿದ್ದೆ. ಪೊಲೀಸ್ ಇಲಾಖೆ ರಸ್ತೆ ಇನ್ನಿತರ ಅಭಿವೃದ್ಧಿಗೆ ಹಣ ಇರುವುದಿಲ್ಲ. ಹಾಗಾಗಿ ಪೊಲೀಸ್ ಇಲಾಖೆಯ ಕೆಲಸಗಳಿಗಾಗಿ ಬರುತ್ತಿದ್ದ ಇತರ ಸಚಿವರಿಗೆ ನನಗೆ ನಿಮ್ಮ ಖಾತೆಯಿಂದ ಹಣ ಕೊಡಿ.. ನಾನು ನಿಮ್ಮ ಕೆಲಸ ಮಾಡುತ್ತೇನೆ ಎಂದು ಮುಯ್ಯಾಳು ಮಾಡಿಕೊಂಡು ಕ್ಷೇತ್ರಕ್ಕೆ ಅನುದಾನ ತಂದಿದ್ದೇನೆ. ಕಳೆದ ಬಾರಿ ನನ್ನ ಮತ್ತು ಸಂಸದರ ಅನುದಾನ ಸೇರಿ ರೂ.3250 ಕೋಟಿ ಅಭಿವೃದ್ಧಿಗೆ ಹಣ ಬಂದಿದೆ ಎಂದರು.

ಹೊಸನಗರ ಪಪಂ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಗ್ರಾಪಂ ಸದಸ್ಯರಾದ ಅರುಣ ಬೈಸೆ, ಕೆ.ಬಿ.ಕುಮಾರ, ಜಾತಪ್ಪ, ಹುಲ್ಲರಿಕೆ ರವಿ ಭಟ್, ಸುರೇಶ, ಅಮೃತ, ಶಾಸಕರ ಸಹಾಯಕರಾದ ಬಸವರಾಜ ಹೊದಲ, ರಾಜೇಶ ಹಿರಿಮನೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

Exit mobile version