
-
ಬಿದನೂರು ಸ್ಮಾರಕಗಳ ಸಂರಕ್ಷಣೆ ಅಗತ್ಯ: ಶ್ರೀ ಸಿದ್ದವೀರ ಸ್ವಾಮಿ|ಜಿಲ್ಲಾಧಿಕಾರಿಗಳು ತುರ್ತು ಗಮನ ಹರಿಸಲಿ : ವಕೀಲ ಕೆ.ವಿ.ಪ್ರವೀಣಕುಮಾರ್ | ಐತಿಹಾಸಿಕ ಸ್ಥಳದಲ್ಲಿ ಕನ್ನಡ ಧ್ವಜಾರೋಹಣ
ಶಿವಮೊಗ್ಗ: ಬಿದನೂರು ನಗರದಲ್ಲಿರುವ ಕೆಳದಿ ಅರಸರ ಸಮಾಧಿ ಮತ್ತು ದೇವಸ್ಥಾನಗಳು ಐತಿಹಾಸಿಕ ಮಹತ್ವದ್ದಾಗಿದ್ದು ಇವುಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯ ಎಂದು ತಾಳಗುಪ್ಪ ಶ್ರೀ ಸಿದ್ದವೀರ ಸ್ವಾಮೀಜಿ ಅಭಿಪ್ರಾಯಿಸಿದರು.
ತಾಲೂಕಿನ ನಗರದ ಕೊಪ್ಪಲು ಮಠದಲ್ಲಿ ವೀರಶೈವ ಸಮಾಜಬಾಂಧವರು ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೆಳದಿ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಬಿದನೂರು ತನ್ನದೇ ಮಹತ್ವ ಹೇಳುತ್ತದೆ. ಅಲ್ಲದೇ ಹೆಚ್ಚಿನ ಅರಸರು ಇಲ್ಲಿಂದಲೇ ಆಳ್ವಿಕೆ ನಡೆಸಿದ್ದು ಇಲ್ಲಿರುವ ಪ್ರತಿಯೊಂದು ಸ್ಥಳಗಳು ಐತಿಹಾಸಿಕ ಮಹತ್ವದ್ದಾಗಿದೆ ಎಂದರು.
ವೀರಶೈವ ಸಮಾಜದ ಪ್ರಮುಖ, ವಕೀಲ ಕೆ.ವಿ.ಪ್ರವೀಣಕುಮಾರ್, ಕೊಪ್ಪಲುಮಠದಲ್ಲಿರುವ ಎರಡು ಕಲ್ಮಠಗಳು ನಿರ್ಲಕ್ಷಕ್ಕೆ ಒಳಗಾಗಿವೆ ಅಲ್ಲದೇ ಒತ್ತುವರಿಯಾಗಿದೆ. ಒಂದು ಕಲ್ಮಠದಲ್ಲಿ ಬಸವ ಮೂರ್ತಿ ಸುತ್ತಲೂ ಗೆದ್ದಲು ಹಿಡಿದಿದೆ. ಇನ್ನೊಂದು ಕಲ್ಮಠದಲ್ಲಿ ವಿಗ್ರಹವೇ ಇಲ್ಲ. ಇಂತಹ ಐತಿಹಾಸಿಕ ಸ್ಮಾರಕಗಳು ಹಾಳುಗೆಡವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
-
ಜಿಲ್ಲಾಧಿಕಾರಿಗಳು ತುರ್ತು ಗಮನಹರಿಸಲಿ : ಕೆ.ವಿ.ಪ್ರವೀಣಕುಮಾರ್|
ಶ್ರೀಧರಪುರದಲ್ಲಿರುವ ಅರಸರ ಸಮಾಧಿಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಬಹುತೇಕ ದೇಗುಲಗಳು ವಿರೂಪಗೊಂಡಿವೆ. ಇನ್ನು ಹಲವು ಲೂಟಿಕೋರರ ಪಾಲಾಗಿದೆ. ಅಲ್ಲದೇ ಎಲ್ಲೆಂದರಲ್ಲಿ ನಿಧಿ ಆಸೆಗಾಗಿ ಸ್ಮಾರಕಗಳನ್ನು ಧ್ವಂಸಗೊಳಿಸುವ ಕೆಲಸ ಕೂಡ ನಿರಂತರ ಆಗುತ್ತಿದೆ. ಪುರಾತತ್ವ ಇಲಾಖೆ ಕೂಡಲೇ ಗಮನವಹಿಸಿ ಕೊಪ್ಪಲು ಮಠದ ಸ್ಮಾರಕಗಳನ್ನು ಸಂರಕ್ಷಿಸಿ ಜೀರ್ಣೋದ್ಧಾರ ಮಾಡಬೇಕು ಮತ್ತು ಜಿಲ್ಲಾಧಿಕಾರಿಗಳು ಕೂಡಲೆ ಈ ಬಗ್ಗೆ ತುರ್ತು ಕ್ರಮಕೈಗೊಳ್ಳಬೇಕು. ಇದು ತಾರ್ಕಿಕ ಅಂತ್ಯ ಮುಟ್ಟುವವರೆಗೂ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
-
ಐತಿಹಾಸಿಕ ಸ್ಮಾರಕ ಸ್ಥಳದಲ್ಲಿ ಕನ್ನಡ ಧ್ವಜಾರೋಹಣ|
ವೀರಶೈವ ಸಮಾಜದ ವತಿಯಿಂದ ಶ್ರೀಧರಪುರ ಸಮಾಧಿ ಸ್ಥಳ, ಕೊಪ್ಪಲು ಮಠದ ದೇಗುಲಗಳನ್ನು ಸ್ವಚ್ಚಗೊಳಿಸಲಾಯಿತು. ಬಳಿಕ ಕಲ್ಮಠದಲ್ಲಿ ಶ್ರೀ ಸಿದ್ದವೀರ ಸ್ವಾಮೀಜಿಗಳು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಸ್ವಚ್ಚತಾ ಕಾರ್ಯದಲ್ಲಿ ಶೇಖರಪ್ಪಗೌಡ, ವಿರುಪಾಕ್ಷ, ವಸಂತ್, ಕಾಂತೇಶ್, ನಾಗರಾಜ್, ಈಶ್ವರಪ್ಪಗೌಡ, ಹರ್ಷ ಬೈದೂರ್, ಕಲ್ಯಾಣ್ ಕುಮಾರ್, ಶಶಿಕುಮಾರ್, ಪ್ರಶಾಂತ್, ಉಮೇಶ್, ದೀಪಕ್ ಇತರರು ಉಪಸ್ಥಿತರಿದ್ದರು.